ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ
ಭಾರತದ ಮಾಜಿ ಪ್ರಧಾನಮಂತ್ರಿ

ಜನನ: ಡಿಸೆಂಬರ್ ೨೫, ೧೯೨೪

ಮರಣ :ಅಗಷ್ಟ ೧೬,೨೦೧೮

ಹುಟ್ಟಿದೂರು: ಗ್ವಾಲಿಯರ್, ಮಧ್ಯಪ್ರದೇಶ

ಭಾರತದ ಪ್ರಧಾನ ಮ೦ತ್ರಿ
ಅಧಿಕಾರಕ್ಕೆ ಬಂದದ್ದು: 11ನೇ ಪ್ರಧಾನಮಂತ್ರಿಯಾಗಿ

ರಾಜಕೀಯ ಪಕ್ಷ: ಭಾರತೀಯ ಜನತಾ ಪಕ್ಷ

ಮೊದಲನೆಯ ಕಾರ್ಯಾವಧಿ
ಅಧಿಕಾರ ವಹಿಸಿಕೊಂಡದ್ದು: ಮೇ ೧೬, ೧೯೯೬

ಅಧಿಕಾರ ಬಿಟ್ಟುಕೊಟ್ಟದ್ದು: ಜೂನ್ ೧, ೧೯೯೬

ಪೂರ್ವಾಧಿಕಾರಿ: ನರಸಿಂಹರಾವ್

ಉತ್ತರಾಧಿಕಾರಿ: ದೇವೇಗೌಡ

ಎರಡನೆಯ ಕಾರ್ಯಾವಧಿ
ಅಧಿಕಾರ ವಹಿಸಿಕೊಂಡದ್ದು: ಮಾರ್ಚ್ ೧೯, ೧೯೯೮

ಅಧಿಕಾರ ಬಿಟ್ಟುಕೊಟ್ಟದ್ದು: ಮೇ ೨೨, ೨೦೦೪

ಪೂರ್ವಾಧಿಕಾರಿ: ಐ ಕೆ ಗುಜ್ರಾಲ್

ಉತ್ತರಾಧಿಕಾರಿ: ಡಾ. ಮನಮೋಹನ್ ಸಿಂಗ್

ಅಟಲ್ ಬಿಹಾರಿ ವಾಜಪೇಯಿ (ಜನನ ಡಿಸೆಂಬರ್ ೨೫, ೧೯೨೪) ಅಟಲ್ ಅವರು ಹುಟ್ಟಿದ್ದು ಕ್ರಿಸ್‍ಮಸ್ ದಿನದಂದು.

 ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾಜಕಾರಣಿಯಾಗಿ ತಮ್ಮ ಅಪೂರ್ವ ಯೋಗದಾನವನ್ನು ನೀಡಿದ್ದಾರೆ. ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ಭಾರತ, ಹಾಗೂ ವಿಶ್ವದಲ್ಲಿ ಹೆಸರು ವಾಸಿಯಾಗಿದ್ದಾರೆ.

*ಜನನ, ಬಾಲ್ಯ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ*

'ಅಟಲ್' ರವರು, ೧೯೨೪ ರಲ್ಲಿ 'ಕೃಷ್ಣದೇವಿ' ಹಾಗೂ 'ಕೃಷ್ಣ ಬಿಹಾರಿ ವಾಜಪೇಯಿ' ಅವರಿಗೆ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ 'ಶಿಂದೆ ಕಿ ಚವ್ವಾಣಿ'ಎನ್ನುವ ಗ್ರಾಮದಲ್ಲಿ ಜನಿಸಿದರು.

ತಂದೆ ಒಬ್ಬ ಕವಿ, ಮಾತ್ತು ಸಾಮಾನ್ಯ ಶಾಲೆಯ ಉಪಾಧ್ಯಾಯರು. ಅಟಲ್ ಅವರ 'ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ' ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.
ಅಟಲ್ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು.
ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ ೧೯೪೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು.

ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು.

*ರಾಜಕೀಯ*

ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ೧೯೬೮ ಹಾಗೂ ೧೯೭೩ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಶ್ರೀ ವಾಜಪೇಯಿ ಯವರು ಲೋಕಸಭೆಗೆ ೧೯೫೭ರಲ್ಲಿ ಮೊದಲು ಆಯ್ಕೆಯಾದರು. [೪]೧೯೭೭ರಲ್ಲಿ ಜನತಾ ಪಾರ್ಟಿ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು.
ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ ೧೯೭೭ ರಿಂದ ಜುಲೈ ೧೯೭೯ ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ೧೯೮೦ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ.

ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು ೧೯೮೦ರಿಂದ ೧೯೮೪ ರವರೆಗೆ ಹಾಗೂ ೧೯೮೬ ರಿಂದ ೧೯೯೩ ಮತ್ತು ೧೯೯೬ರಲ್ಲಿ ಕಾರ್ಯ ನಿರ್ವಹಿಸಿದರು. ೧೧ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.

*ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ*

೧೯೯೬ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. ೫೧೯ ಸೀಟುಗಳ ಪೈಕಿ ಬಿ ಜೆ ಪಿ ೧೮೭ ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ ೧೪೦ ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ ೧೯೨ ಸೀಟುಗಳನ್ನು ಗೆದ್ದುಕೊಂಡಿತು.

ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.
ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.

ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.

*ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ*

೧೯೯೮ ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ ೧೦ ಮಾರ್ಚ್ ೧೯೯೮ ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.

ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. ೧೯೯೯ ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.
ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.


ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು.
ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.

*ಅಣ್ವಸ್ತ್ರ ಪರೀಕ್ಷೆ (ಫೋಖ್ರಾನ್ -II)*

ಮೇ ೧೯೯೮ ರಲ್ಲಿ ಭಾರತ ತನ್ನ ಸೇನಾ ಬಲವನ್ನು ಎಲ್ಲ ವಿಧದಿಂದಲೂ ಹೆಚ್ಚಿಸಿಕೊಳ್ಳಲು ತೀರ್ಮಾನಿಸಿ ಆಪರೇಷನ್ ಶಕ್ತಿ ಹೆಸರಿನ ಅಣು ಬಾಂಬ್ ಪರೀಕ್ಷೆ ನಡೆಸಿತು. ೧೯೭೪ ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತವು ಮೊದಲ ಬಾರಿಗೆ ಅಣು ಸ್ಫೋಟವನ್ನು ಪರೀಕ್ಷಾರ್ಥವಾಗಿ ನಡೆಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು.
೧೯೯೯ ರಲ್ಲಿ ವಾಜಪೇಯಿ ಪ್ರಧಾನಿ ಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ತಾನದ ಫೋಖ್ರಾನ್ ಎಂಬಲ್ಲಿ ಸುಧಾರಿತ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಉತ್ಸುಕರಾಗಿದ್ದ ವಿಜ್ಞಾನಿಗಳಿಗೆ ವಾಜಪೇಯಿಯವರಿಂದ ಹಸಿರು ನಿಶಾನೆ ದೊರೆಯಿತು. ಆದರೆ ನಿಜವಾಗಿ ಸಾಧಿಸಿ ತೋರಿಸುವುದು ಬಹಳ ಕಷ್ಟಕರವಾಗಿತ್ತು. ದೇಶದ ತುಂಬಾ ಹರಡಿಕೊಂಡಿದ್ದ ಪಾಕಿಸ್ತಾನಿ ಬೇಹುಗಾರಿಕೆ ವ್ಯಕ್ತಿಗಳು ಹಾಗೂ ಅಮೇರಿಕಾ ಗುಪ್ತಚರ ಇಲಾಖೆಯ (ಸಿ ಐ ಎ) ಏಜೆಂಟ್ ಗಳು ವಿಷಯ ಸೋರಿಕೆ ಮಾಡುವ ಆತಂಕವಿದ್ದೇ ಇತ್ತು.

೧೯೭೪ ರ ನಂತರದ ದಿನಗಳಲ್ಲಿ ಕೆಲವಾರು ಬಾರಿ ಭಾರತದ ಅಣ್ವಸ್ತ್ರ ಪರೀಕ್ಷೆಗೆ ಅಮೇರಿಕಾ ಗುಪ್ತಚರ ಇಲಾಖೆಯ ಏಜೆಂಟ್ ಗಳು ಸುದ್ದಿ ಸೋರಿಕೆ ಮಾಡಿ ತಣ್ಣೀರೆರಚಿದ್ದರು.

ಈ ಬಾರಿ ಪರೀಕ್ಷೆಯನ್ನು ಇವರಾರಿಗೂ ತಿಳಿಯದಂತೆ ನಡೆಸಬೇಕಾಗಿತ್ತು. ಗುಪ್ತಚರ ಇಲಾಖೆಯ ಏಜೆಂಟ್ ಗಳಷ್ಟೇ ಅಲ್ಲದೆ ಅಮೇರಿಕಾ ದೇಶದ ಉಪಗ್ರಹವೊಂದು ಭಾರತದ ಅಂತರಾಷ್ಟ್ರೀಯ ಗಡಿಗಳ ಮೇಲೆ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಗಾವಲಿಟ್ಟಿತ್ತು. ಆ ಉಪಗ್ರಹ ಎಷ್ಟು ಕರಾರುವಕ್ಕಾಗಿತ್ತು ಎಂದರೆ ಭಾರತದ ಗಡಿಯಲ್ಲಿ ನಿಂತಿರುವ ಯೋಧನೊಬ್ಬನ ಕೈಗೆ ಕಟ್ಟಿದ ಗಡಿಯಾರದ ಫೋಟೋ ತೆಗೆದು ಅದರಲ್ಲಿ ಸಮಯವೆಷ್ಟು ಎಂದು ಹೇಳಬಹುದಿತ್ತಂತೆ.

ಇಂತಹ ಬಿಗಿಯಾದ ಹದ್ದಿನ ಕಣ್ಣು ಇರಿಸಿರುವ ಸಮಯದಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸುವುದು ದೊಡ್ಡ ಸಾಹಸವೇ ಆಯಿತು. ಅಣು ಪರೀಕ್ಷೆ ನಡೆಸಬೇಕಾಗಿದ್ದ ಜಾಗದಲ್ಲಿ "ನೀರಾವರಿ ಕಾಮಗಾರಿ ನಡೆಯುತ್ತಿದೆ" ಎಂದು ಬೋರ್ಡು ಹಾಕಲಾಗಿತ್ತಂತೆ. ವಿಜ್ಞಾನಿಗಳಿಗೆ ಹಾಗೂ ಭೂಮಿಯನ್ನು ಅಗೆಯುತ್ತಿದ್ದ ಭಾರತೀಯ ಸೈನಿಕರಿಗೆ ಸಾರ್ವಜನಿಕ ಇಲಾಖೆಯ ಕಾಮಗಾರಿ ಕಾರ್ಮಿಕರಿಗೆ ಕೊಡಲಾಗುವಂತಹ ಮಾದರಿಯ ಬಟ್ಟೆ ಕೊಡಲಾಗಿತ್ತಂತೆ.
ಇನ್ನು ಯಾವ ಕಾರಣಕ್ಕೂ ಯಾರಿಗೂ ಅನುಮಾನ ಬರದಿರುವಂತೆ ನೋಡಿಕೊಳ್ಳಲು ಸ್ಫೋಟಕ್ಕೆ ಸಂಬಂಧಿಸಿದ ಕಾರ್ಯವೆಲ್ಲವೂ ಬರೀ ರಾತ್ರಿ ವೇಳೆ ನಡೆಯುತ್ತಿತ್ತಂತೆ. ಅಣು ಬಾಂಬ್ ಸ್ಫೋಟವಾದ ವಿಷಯ ತಿಳಿದಿದ್ದು ಖುದ್ದು ವಾಜಪೇಯಿಯವರು ಪ್ರಧಾನಮಂತ್ರಿ ಗೃಹದಲ್ಲಿ ಪತ್ರಕರ್ತರ ಸಭೆ ಕರೆದು ಫೋಖ್ರಾನ್ ಬಾಂಬ್ ಸ್ಫೋಟದ ಬಗ್ಗೆ ಅಧೀಕೃತವಾಗಿ ಧೃಡಪಡಿಸಿದಾಗಲೇ.
ಫೋಖ್ರಾನ್ ಸಮೀಪದಲ್ಲಿದ್ದ ಹಳ್ಳಿಯೊಂದರ ಜನಗಳನ್ನು ಬಾಂಬ್ ಸ್ಫೋಟಕ್ಕೂ ಕೆಲವು ಗಂಟೆಗಳ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತಂತೆ. ಆದರೆ ಸ್ಥಳಾಂತರಗೊಂಡ ಜನರಿಗೂ ಕಾರಣವೇನು ಎನ್ನುವುದು ತಿಳಿದಿರಲಿಲ್ಲವಂತೆ. ಸ್ಫೋಟಾನಂತರ ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಭಾರತದ ಸೇನೆಯು ಸೇನಾ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಅಣ್ವಸ್ತ್ರ ಹೊಂದುವ ಹಾಗೂ ಅದರ ಶಕ್ತಿಯನ್ನು ಖಾತ್ರಿ ಪಡಿಸಿಕೊಂಡ ನಿಲುವನ್ನು ಸಮರ್ಥಿಸಿಕೊಂಡರೆ, ಅಮೇರಿಕಾ, ಕೆನಡಾ, ಜಪಾನ್, ಬ್ರಿಟನ್ ಹಾಗೂ ಯೂರೋಪ್ ಒಕ್ಕೂಟದ ದೇಶಗಳು ಭಾರತದ ನಿಲುವಿಗೆ ಹರಿಹಾಯ್ದವು.
ಭಾರತದೊಂದಿಗೆ ಇನ್ನು ಮುಂದೆ ನವೀನ ತಂತ್ರಜ್ಞಾನದ ಮಾಹಿತಿಗಳನ್ನು ಹಾಗೂ ಯಾವುದೇ ರೀತಿಯ ಸಂಪನ್ಮೂಲಗಳನ್ನು ಹಂಚಿ ಕೊಳ್ಳದಂತೆ ತಮ್ಮ ತಮ್ಮಲ್ಲೇ ಒಪ್ಪಂದ ಮಾಡಿಕೊಂಡವು. ಭಾರತದ ಅಣ್ವಸ್ತ್ರ ಪರೀಕ್ಷೆಯ ವಿಷಯ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬಾರೀ ಚರ್ಚೆಗೆ ಗ್ರಾಸವಾಯಿತು. ಹಲವಾರು ದೇಶಗಳು ಭಾರತದಲ್ಲಿ ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದವು.
ಮತ್ತೆ ಕೆಲವು ರಾಷ್ಟ್ರಗಳು ಭಾರತಕ್ಕೆ ಯಾವ ಸಹಾಯಧನವನ್ನು ಕೊಡದಂತೆ ವಿಶ್ವಸಂಸ್ಥೆಯಲ್ಲಿ ದೂರಿ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿಸಿದರು. ವಾಜಪೇಯಿ ನೇತೃತ್ವದಲ್ಲಿ ಇಂತಹ ಕ್ಲಿಷ್ಟ ಪರಿಸ್ತಿತಿಯನ್ನು ಬಗೆಹರಿಸಿಕೊಳ್ಳಲಾಯಿತು. ವಾಜಪೇಯಿ ಮೇಲೆ ಜನರಿಗಿದ್ದ ನಂಬಿಕೆ ಇಮ್ಮಡಿಯಾಗಲು ಇದೂ ಒಂದು ಕಾರಣವಾಯಿತು.

ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರೂ ಕೊಂಡಾಡಿದರು, ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು.

*ಕಾರ್ಗಿಲ್ ಯುದ್ಧ*

ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು ೧೯೯೯ ನೇ ಇಸವಿಯ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರ ಕಣ್ಣು ಕೆಂಪಗಾಗಿಸಲು ಒಂದು ಕಾರಣವಾಯಿತು.
ಬರಿಯ ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್ ಗಳ ಮುಖಾಂತರ ಸಿಯಾಚಿನ ಗಡಿ ವರೆವಿಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ತಾನಿ ನಾಯಕರ ಹೇಳಿಕೆಗಳು ಪಾಕಿಸ್ತಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು.
ಕೇಂದ್ರ ಸರ್ಕಾರ ಜೂನ್ ೧೯೯೯ ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡುಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು. * ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ಸುಮಾರು ೫೦೦ ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು ೬೦೦ - ೪೦೦೦ ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಯಿತು.

ಇದರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಆಗಷ್ಟೇ ತಾನೇ ಸಿದ್ಧಪದಿಸಿಕೊಂಡಿದ್ದ ಅಣು ಬಾಂಬ್ ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿದವು. ವಿಷಯ ತಿಳಿದ ಆಗಿನ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣು ಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೇರಿಕಾ ಹಾಗು ಚೀನಾ ತಾವು ಮಧ್ಯ ಪ್ರವೇಶಿಸುವುದಕ್ಕೆ ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನು ನಿಂತಿರಲಿಲ್ಲ, ಪಾಕಿಸ್ತಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.
ಕೂಡಲೇ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ತಾನದಲ್ಲಿ ಸರ್ಕಾರಕ್ಕೂ ಹಾಗು ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆ ಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು.
ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞೆಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ತಾನದ ಒಂದು ಸೇನಾ ತುಕಡಿ(ಏನ್ ಎಲ್ ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕಿಸ್ತಾನಿ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು.
ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕಿಸ್ತಾನ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗು ಹಲವಾರು ಸಾವು ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕಿಸ್ತಾನದ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು.
ಈ ಯುದ್ಧ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ದೇಶದಲ್ಲಿ ಅಸಂಖ್ಯಾತ ಜನಗಳು ವಾಜಪೇಯಿಯವರ ಧೈರ್ಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಾಗು ಎಷ್ಟೇ ಕಷ್ಟವಾದರೂ ಅದಕ್ಕೆ ಬದ್ಧರಾಗಿ ಗೆಲ್ಲುವ ಛಾತಿಯನ್ನು ಮೆಚ್ಚಿಕೊಂಡರು ಹಾಗು ಅವರ ಅಭಿಮಾನಿಗಳು ಆದರು.
ಕಾರ್ಗಿಲ್ ಯುದ್ಧ ಅಷ್ಟೊಂದು ಪ್ರಚಾರ ಪಡೆಯಲು ಇದ್ದ ಒಂದೇ ಒಂದುಕಾರಣವೆಂದರೆ ಅದು ಎರಡು ಅಣ್ವಸ್ತ್ರ ರಾಷ್ಟ್ರಗಳು ಮುಖಾ ಮುಖಿಯಾಗಿ ಯುದ್ಧ ಮಾಡುತ್ತಿರುವುದು. ದಕ್ಷಿಣ ಏಷಿಯಾದ ಈ ಎರಡೂ ಸಹೋದರ ರಾಷ್ಟ್ರಗಳೇ ಅಣ್ವಸ್ತ್ರಗಳಿಂದ ಬಡಿದಾಡಿ ಕೊಂಡರೆ ಜಗತ್ತಿಗೆ ಕೆಟ್ಟ ಅರ್ಥ ರವಾನೆಯಾಗುವುದಾಗಿ ಎಲ್ಲ ರಾಷ್ಟ್ರಗಳಿಗೂ ಆತಂಕ ಮನೆ ಮಾಡಿತ್ತು. ಆದರೆ ಅಂದಿನ ಭಾರತದ ಪ್ರಧಾನಿ ವಾಜಪೇಯಿ ಅಷ್ಟೇ ಸಮಾಧಾನದಿಂದ ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು .
ಯುದ್ಧಕ್ಕಿಂತಲೂ ಮುಂಚೆ ಪಾಕಿಸ್ತಾನದೊಂದಿಗೆ ಶಾಂತಿ ಮಾತು ಕತೆ ನಡೆಸಿದ್ದರು. ಎರಡೂ ರಾಷ್ಟ್ರಗಳ ಶಾಂತಿಯ ಹಾಗೂ ಸ್ನೇಹದ ಧ್ಯೋತಕವಾಗಿ ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಬಸ್ ಸೇವೆಯನ್ನು ಆರಂಭಿಸಿದ್ದರು. ಯುದ್ಧ ಕಾಲದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಡ ಸೃಷ್ಟಿಯಾದರೂ ತುರ್ತು ಪರಿಸ್ತಿತಿ ಘೋಷಿಸದೆ ಸೇನೆಯನ್ನು ಹುರಿದುಂಬಿಸಿದರು. ಯುದ್ಧ ಸಮಯದಲ್ಲಿ ಸೈನಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಅಧಿಕಾರ ಕೊಟ್ಟರು.
ಸಣ್ಣ ಪುಟ್ಟ ವಿಚಾರಗಳಿಗೂ ಮೇಲಧಿಕಾರಿಗಳ ಅಪ್ಪಣೆಗಾಗಿ ಅಲೆಯುತ್ತಿದ್ದ ಸೇನೆಯ ವಕ್ತಾರರಿಗೆ ಕೊಂಚ ಸಮಾಧಾನವೆನಿಸಿದ್ದೆ ಆಗ. ಇವೆಲ್ಲವುಗಳ ಮುಖಾಂತರ ವಾಜಪೇಯಿ ಶತ್ರು ಯಾರೇ ಆಗಿದ್ದರು ನಮ್ಮವರಲ್ಲಿ ಹುರುಪು ಮೂಡಿಸಿದರೆ ಯುದ್ಧವನ್ನು ಅರ್ಧ ಗೆದ್ದಂತೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು. ಈ ಎಲ್ಲ ಕಾರಣಗಳಿಂದಲೇ ವಾಜಪೇಯಿ ಜನ ಮಾನಸಗಳಲ್ಲಿ ನಿಂತರು.
ಪ್ರಧಾನಮಂತ್ರಿಯಾಗಿ ಮೂರನೇ ಕಾರ್ಯಾವಧಿ
ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ ೨೭೦ ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ ೧೫೬ ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.
ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ ೧೯೯೯ ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.
ಇಂಡಿಯನ್ ಏರ್ ಲೈನ್ಸ್ ಹೈಜಾಕ್ ಪ್ರಕರಣ
ಡಿಸೆಂಬರ್ ೧೯೯೯ ರಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ನವದೆಹಲಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಅನ್ನು ತಾಲಿಬಾನಿ ಉಗ್ರರು ಪ್ರಯಾಣಿಕರ ಸಮೇತ ಅಪಹರಿಸುವ ಮೂಲಕ ರಾಷ್ಟ್ರೀಯ ಬಿಕ್ಕಟ್ಟಿಗೆ ನಾಂದಿ ಹಾಡಿದರು. ದೆಹಲಿಯಲ್ಲಿ ಇಳಿಯಬೇಕಾದ ವಿಮಾನವನ್ನು ತಾಲಿಬಾನ್ ಮುಷ್ಟಿಯಲ್ಲಿದ್ದ ಆಫ್ಘಾನಿಸ್ಥಾನಕ್ಕೆ ಕೊಂಡೊಯ್ದು ವಿಮಾನದ ಸಿಬ್ಬಂದಿ ಹಾಗು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು.
ವಿಮಾನವನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬೇಡಿಕೆಗಳನ್ನಿಟ್ಟರು. ಆಗ ಭಾರತ ಸರ್ಕಾರಕ್ಕೆ ಸಿಕ್ಕಿಬಿದ್ದು ಸೆರೆಯಾಗಿದ್ದ ಉಗ್ರ 'ಮೌಲಾನ ಮಸೂದ್ ಅಝರ್' ನ ಬಿಡುಗಡೆಯೂ ಸೇರಿ ಭಯೋತ್ಪಾದನೆಗೆ ಅನುಕೂಲವಾಗುವಂತಹ ಅನೇಕ ಬೇಡಿಕೆಗಳು ಈಡೇರುವ ವರೆವಿಗೂ ಪ್ರಯಾಣಿಕರ ಬಿಡುಗಡೆ ಸಾಧ್ಯವಿಲ್ಲವೆಂದು ವಾಜಪೇಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ದೇಶದಾದ್ಯಂತ ಆತಂಕ ಮನೆ ಮಾಡುವಂತೆ ಮಾಡಿದ್ದರು.
ಉಗ್ರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಲ ಪ್ರಯೋಗ ಮಾಡುವ ಮೂಲಕ ಪ್ರಯಾಣಿಕರನ್ನು ಮರಳಿ ಪಡೆಯುವ ಮಾರ್ಗ ಸಾಧುವಾಗಿರಲಿಲ್ಲ ಹಾಗೂ ನೈಜತೆಗೆ ಹತ್ತಿರವೂ ಆಗಿರಲಿಲ್ಲ. ಈ ಕಾರಣದಿಂದ ಸರ್ಕಾರ ಉಗ್ರರ ಮಾತಿಗೆ ಮಣಿಯಲೇ ಬೇಕಾಯಿತು. ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ ಜವಾಬ್ದಾರಿ ಮೆರೆದು ಭಾರತದ ಜೈಲಿನಲ್ಲಿದ್ದ ತಾಲಿಬಾನಿ ಉಗ್ರ ಪ್ರಮುಖರನ್ನು ತಮ್ಮೊಂದಿಗೆ ಕರೆದುಕೊಂಡು ಆಫ್ಘಾನಿಸ್ತಾನಕ್ಕೆ ಹೋಗಿ ಭಾರತೀಯ ಪ್ರಯಾಣಿಕರನ್ನು ಹಾಗೂ ಉಗ್ರರನ್ನು ವಿನಿಮಯ ಮಾಡಿಕೊಂಡು ಭಾರತಕ್ಕೆ ಹಿಂದಿರುಗಿದರು.
೨೦೦೧ರ ಸಂಸತ್ ಭವನದ ಮೇಲಿನ ದಾಳಿ
೨೦೦೧ರ ಡಿಸೆಂಬರ್ ೧೩ ರಂದು ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳಿಂದ ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಯಿತು.ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ಸಂಸತ್ ಭವನದ ಆವರಣ ಪ್ರವೇಶಿಸಿಸಿ ಹಠಾತ್ ಗುಂಡಿನ ದಾಳಿ ನಡೆಸಲು ಶುರು ಮಾಡಿದ ಉಗ್ರರು ಸಂಸತ್ ಭವನದ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಆಹುತಿ ಪಡೆದರು.
ದಾಳಿಗೂ ಮುನ್ನ ಕೇವಲ ೪೦ ನಿಮಿಷಗಳ ಮುಂಚೆ ರಾಜ್ಯ ಸಭಾ ಹಾಗು ಲೋಕ ಸಭಾ ಅಧಿವೇಶನಗಳು ಮುಗಿದಿದ್ದವು.ಆದ್ದರಿಂದ ಬಹುತೇಕ ಸಂಸದರು, ಮಂತ್ರಿಗಳು ಹಾಗು ಅಧಿಕಾರಿ ವರ್ಗದವರು ಸಂಸತ್ ಭವನದಲ್ಲಿ ಇರಲಿಲ್ಲ. ಆದರೂ ಆಗಿನ ಗೃಹ ಮಂತ್ರಿಗಳಾಗಿದ್ದ ಎಲ್.ಕೆ ಅಡ್ವಾಣಿ ಹಾಗು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಹರಿನ್ ಪಾಠಕ್ ಸಂಸತ್ ಭವನದ ಒಳಗೆ ಇದ್ದರು ಎಂಬ ವರದಿಗಳಿವೆ.
೧೦೦ ಜನಕ್ಕೂ ಮಿಗಿಲಾಗಿ ರಾಜಕಾರಣಿಗಳು ಆ ಸಮಯದಲ್ಲಿ ಸಂಸತ್ ಒಳಗಿದ್ದರು. ಏಕಾಏಕಿ ದಾಳಿ ಮಾಡಿದ ಉಗ್ರರು ಎ ಕೆ ೪೭, ಗ್ರೆನೇಡು ಉದಾಹಕಗಳು, ಗ್ರೆನೇಡುಗಳು ಹಾಗು ಪಿಸ್ತೂಲುಗಳನ್ನು ಹೊಂದಿದ್ದರು ಎಂಬ ವರದಿ ದೆಹಲಿ ಪೋಲಿಸ್ ರಿಂದ ಬಹಿರಂಗವಾಗಿದೆ. ಶೀಘ್ರ ತ್ವರೆ ಮಾಡಿದ ಭಾರತೀಯ ರಕ್ಷಣಾ ಪಡೆಗಳು ಸಂಸತ್ ಭವನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿಸಿ ಸತತ ಪ್ರಯತ್ನ ಪಟ್ಟು ಉಗ್ರರನ್ನು ಆಹುತಿ ಪಡೆದರು.
ಮುಂದೆ ಹತರಾದ ಅಷ್ಟೂ ಉಗ್ರರರು ಪಾಕಿಸ್ತಾನಿ ಪ್ರಜೆಗಳು ಎಂಬುದು ಸಾಬೀತಾಯಿತು. ಅಮೇರಿಕಾದ ಮೇಲೆ ದಾಳಿ ನಡೆದು ಕೇವಲ ಮೂರು ತಿಂಗಳ ಒಳಗೆ ಭಾರತದ ಮುಖ್ಯ ಕಟ್ಟಡದ ಮೇಲೆ ನಡೆದ ಈ ದಾಳಿ ಇಡೀ ದೇಶವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿತು ಹಾಗೂ ಇತರ ದೇಶಗಳೂ ಭಯೋತ್ಪಾದನೆಯ ಹೆಸರು ಕೇಳಿ ಬೆಚ್ಚುವಂತೆ ಮಾಡಿತು.
ಪಾಕಿಸ್ತಾನ ಸರ್ಕಾರ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿತಾದರೂ ಭಾರತದ ಗುಪ್ತಚರ ಇಲಾಖೆ ದಾಳಿಗೆ ಪಾಕಿಸ್ತಾನದಲ್ಲೇ ಪಿತೂರಿ ನಡೆದಿತ್ತು ಹಾಗು ಅದರಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವೂ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿತು. ಪ್ರಧಾನಿ ವಾಜಪೇಯಿ ಸೇನೆಯನ್ನು ಶೀಘ್ರ ವಿವಿಧ ಪ್ರದೇಶಗಳಲ್ಲಿ ನಿಯೋಜಿಸುವಂತೆ ಆದೇಶ ಹೊರಡಿಸಿದರು.
ಸುಮಾರು ೫ ಲಕ್ಷ ಸೇನಾ ಸಿಬ್ಬಂದಿ ಪಂಜಾಬ್, ರಾಜಸ್ತಾನ, ಗುಜರಾತ್ ಹಾಗು ಜಮ್ಮು ಕಾಶ್ಮೀರ ಪ್ರಾಂತ್ಯಗಳ ಅಂತರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಂತರು. ಪಾಕಿಸ್ತಾನ ವು ಇದಕ್ಕೆ ಪ್ರತ್ಯುತ್ತರವೆಂಬಂತೆ ತನ್ನ ಸೈನಿಕರನ್ನು ಅಂತರಾಷ್ಟ್ರೀಯ ಗಡಿಯಲ್ಲಿ ತಂದು ನಿಲ್ಲಿಸಿತು. ಅದೇ ಸಮಯಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗು ಸೇನೆಯ ನಡುವೆ ಆಗಾಗ ಕದನಗಳು ಮರುಕಳಿಸುತ್ತಲೇ ಇದ್ದವು.
ಆ ಕದನ ಉತ್ಸಾಹಿ ಭಯೋತ್ಪಾದಕರೂ ಪಾಕಿಸ್ತಾನಿ ಪ್ರಾಯೋಜಿತ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದ್ದ ಕಾರಣ ಎರಡೂ ದೇಶಗಳು ಯುದ್ಧ ಆರಂಭಿಸುವ ಅಂತಿಮ ಹಂತಕ್ಕೆ ಬಂದು ಹಿಂದೆ ಸರಿದಿದ್ದವು. ಎರಡೂ ದೇಶಗಳು ಅಣ್ವಸ್ತ್ರ ಹೊಂದಿದ್ದ ಕಾರಣ, ಯುದ್ಧವಾದರೆ ಇಡೀ ದಕ್ಷಿಣ ಏಷ್ಯಾ ಅಲ್ಲೋಲ ಕಲ್ಲೋಲವಾಗುವುದು ಸತ್ಯಕ್ಕೆ ಹತ್ತಿರವಾಗಿತ್ತು. ಈ ವಿದ್ಯಮಾನಗಳನ್ನೆಲ್ಲ ಗಮನಿಸುತ್ತಿದ್ದ ವಿದೇಶಿ ಪ್ರವಾಸಿಗರು ತುರ್ತಾಗಿ ಎರಡೂ ದೇಶಗಳಿಂದ ನಿರ್ಗಮಿಸಿದರು.
ಭಯೋತ್ಪಾದನೆಯನ್ನು ಹತ್ತಿಕ್ಕುವ ಸಲುವಾಗಿ ವಾಜಪೇಯಿ ಆಡಳಿತ ಭಯೋತ್ಪಾದನಾ ನಿಷೇಧ ಕಾಯ್ದೆ ಯನ್ನು ಸಿದ್ಧಪಡಿಸಿ ಜಾರಿ ಮಾಡಿತು. ಯಾರನ್ನು ಬೇಕಾದರೂ ಭಯೋತ್ಪಾದಕರು ಎಂದು ಹಿಡಿದು ಶಿಕ್ಷಿಸುವ ಅವಕಾಶಗಳು ಆ ಕಾಯ್ದೆ ಯಲ್ಲಿ ಇರುವುದರಿಂದ ಈ ಕಾಯ್ದೆ ಜಾರಿಯಾಗ ಕೂಡದು ಎಂದು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ವಿರೋಧ ತೋರಿದವು. ವಿಪಕ್ಷಗಳು ಕೂಡ ಈ ವಿಚಾರದಲ್ಲಿ ನಕಾರಾತ್ಮಕವಾಗಿ ಸ್ಪಂದಿಸಿದ್ದವು.
ಇತರ ವಿಷಯಗಳು
ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ. ೨೦೦೫ ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ.
ತಮ್ಮ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಪೋಖ್ರಾನ್ ಅಣು ಪರೀಕ್ಷೆ, ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭ ತನ್ನ ಕನಸಿನಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು.
ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ೧೫ ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, "ಸರ್ವ ಶಿಕ್ಷಾ ಅಭಿಯಾನ" ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ.
ಭಾರತದ ಹಿರಿಯ ಪ್ರಜೆ, ರಾಜಕಾರಣಿಗಳಲ್ಲೆ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ಎಂದು ತಮ್ಮ ರಾಜಕೀಯ ವಿರೋದಿಗಳಿಂದಲೇ ಕರೆಸಿಕೊಂಡವರು ಅಟಲ್ ಬಿಹಾರಿ ವಾಜಪೇಯಿ.ಯು ಪಿ ಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನ್ ಮೋಹನ್ ಸಿಂಗ್ ವಾಜಪೇಯಿಯವರನ್ನು 'ಭಾರತೀಯ ರಾಜಕೀಯ ರಂಗದ ಭೀಷ್ಮ ಪಿತಾಮಹ' ಎಂದು ವರ್ಣಿಸಿದ್ದಾರೆ. ವಾಜಪೇಯಿ ಯವರಲ್ಲಿ ಅತ್ಯಂತ ಗೌರವವಿರಿಸಿಕೊಂಡಿರುವ ಮನ್ ಮೋಹನ್ ಸಿಂಗ್ ವಾಜಪೇಯಿಯವರ ಪ್ರತೀ ಜನ್ಮ ದಿನದಂದು ವಯಕ್ತಿಕವಾಗಿ ಶುಬಾಶಯಗಳನ್ನೂ ತಿಳಿಸುತ್ತಾರೆ.
೧೯೭೭ ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ ಅವರು ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭ ದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯರು ಅಟಲ್. ವಿಶೇಷವೆಂದರೆ ಅವರು ಭಾರತದ ಅವಿವಾಹಿತ ಪ್ರಧಾನ ಮಂತ್ರಿಯಾಗಿದ್ದರು .
ರಾಜಕೀಯಾನಂತರ ಜೀವನ
ಡಿಸೆಂಬರ್ ೨೦೦೫ ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವನೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿ ಜೆ ಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ "ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ" ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ ಬಳಲಿದ ವಾಜಪೇಯಿ ದೆಹಲಿಯ ಉನ್ನತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಪರಿಣಾಮ ೨೦೦೯ ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಅವರು ಭಾಗಿಯಾಗಲಿಲ್ಲ.

ಆರೋಗ್ಯ ಸಮಸ್ಯೆಗಳು
ವಾಜಪೇಯಿ ೨೦೦೧ ನೇ ಇಸವಿಯಲ್ಲಿ ಮುಂಬೈನ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಪ್ಪು ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ೨೦೦೯ ರಲ್ಲಿ ಪಾರ್ಶ್ವ ವಾಯುವಿಗೆ ತುತ್ತಾದ ವಾಜಪೇಯಿ ಸ್ಪಷ್ಟವಾಗಿ ಮಾತನಾಡುವ ಶಕ್ತಿ ಕಳೆದುಕೊಂಡರು. ಸದ್ಯಕ್ಕೆ ವ್ಹೀಲ್ ಚೇರ್ ಮಾತ್ರ ಬಳಸುವ ವಾಜಪೇಯಿ ಜನರನ್ನು ಗುರುತಿಸಲಾರರು ಎಂಬ ವಿಷಯಗಳು ಹರಿದಾಡುತ್ತಿವೆ.

ದೀರ್ಘ ಕಾಲೀನ ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿದ್ದು ಇತ್ತೀಚಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದಿಲ್ಲ. ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ, ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯಲು ಮಾತ್ರವೇ ಮನೆಯಿಂದ ಹೊರಗೆ ಬರುವಷ್ಟು ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ.
ವಾಜಪೇಯಿ ನಡೆದು ಬಂದ ಹಾದಿ ಸಂಪಾದಿಸಿ
೧೯೫೧ - ಭಾರತೀಯ ಜನ ಸಂಘ್ ಪಕ್ಷದ ಸಂಸ್ಥಾಪನೆ
೧೯೫೭ - ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು
೧೯೫೭-೭೭ - ಸಂಸತ್ ನಲ್ಲಿ ಭಾರತೀಯ ಜನಸಂಘ್ ಪಕ್ಷದ ನಾಯಕನಾಗಿದ್ದು
೧೯೬೨ - ರಾಜ್ಯ ಸಭೆಯ ಸದಸ್ಯರಾಗಿದ್ದು
೧೯೬೬ - ೬೭ - ಸರ್ಕಾರಿ ಖಾತ್ರಿ ಸಮಿತಿಯ ಛೇರ್ಮನ್
೧೯೬೭ - ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
೧೯೬೭-೭೦ - ಸಾರ್ವಜನಿಕ ಖಾತೆ ಸಮಿತಿಗೆ ಛೇರ್ಮನ್
೧೯೬೮-೭೩ - ಭಾರತೀಯ ಜನಸಂಘ್ ಪಕ್ಷದ ಅಧ್ಯಕ್ಷರಾಗಿ
೧೯೭೧ - ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
೧೯೭೭ - ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
೧೯೭೭ - ೭೯ - ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ
೧೯೭೭ - ೮೦ - ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಾಗಿ
೧೯೮೦ - ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
೧೯೮೦-೮೬ - ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ
೧೯೮೦-೮೪, ೧೯೮೬ ಹಾಗು ೧೯೯೩ - ೯೬ - ಸಂಸತ್ ನಲ್ಲಿ ಬಿ ಜೆ ಪಿ ನಾಯಕ ರಾಗಿ
೧೯೮೬ - ರಾಜ್ಯಸಭಾ ಸದಸ್ಯರಾಗಿ
೧೯೮೮ - ೯೦ - ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ
೧೯೯೧ - ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
೧೯೯೧-೯೩ - ಸಾರ್ವಜನಿಕ ಖಾತೆ ಸಮಿತಿಯ ಛೇರ್ಮನ್
೧೯೯೩-೯೬ - ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್ ಹಾಗು ಲೋಕಸಭಾ ವಿಋಒಶ ಪಕ್ಷದ ನಾಯಕ
೧೯೯೬- ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ
೧೬ ಮೇ ೧೯೯೬ - ೩೧ ಮೇ ೧೯೯೬ - ಭಾರತದ ಪ್ರಧಾನ ಮಂತ್ರಿಯಾಗಿ
೧೯೯೬-೯೭ - ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ
೧೯೯೭-೯೮ - ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್
೧೯೯೮ - ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು
೧೯೯೮-೯೯ - ಭಾರತದ ಪ್ರಧಾನ ಮಂತ್ರಿಗಳು, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು
೧೯೯೯ - ಹದಿಮೂರನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
೧೩ ಅಕ್ಟೋಬರ್ ೧೯೯೯ ರಿಂದ ೧೩ ಮೇ ೨೦೦೪ ರವರೆಗೆ - ಭಾರತದ ಪ್ರಧಾನ ಮಂತ್ರಿಗಳಾಗಿ
೨೦೦೪ - ಹದಿನಾಲ್ಕನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
೨೦೦೫ - ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ
ಪ್ರಶಸ್ತಿ/ಗೌರವ/ ಸನ್ಮಾನಗಳು ಸಂಪಾದಿಸಿ
೧೯೯೨ ರಲ್ಲಿ, ಪದ್ಮ ವಿಭೂಷಣ,
೧೯೯೪ ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ,
೧೯೯೪ ರಲ್ಲಿ, ಉತ್ತಮ ರಾಜಕೀಯ ಪಟು ಗೌರವ,
೧೯೯೪ ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ,
೨೦೧೫ ರಲ್ಲಿ ಭಾರತ ರತ್ನ ಪ್ರಶಸ್ತಿ [೬][೭]
೨೦೧೫ ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ

Comments